Posted on 08-09-2025 |
Share: Facebook | X | Whatsapp | Instagram
ಎನ್.ಇ.ಎಸ್.ಐ.ಎ.ಎಸ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಶೈಕ್ಷಣಿಕ ವರ್ಷದ ಉದ್ಘಾಟನೆ
ಶಿವಮೊಗ್ಗ, ಸೆ. 08: ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ಘಟಕ-೨ರ 2025-26ನೇ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮವನ್ನು ಸೋಮವಾರದಂದು ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಪ್ರೊ. ಶಿವಮೂರ್ತಿ ಪಿ.ಜಿ, ನಿವೃತ್ತ ಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾಲಯ ಮತ್ತು ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಪ್ರಶಸ್ತಿ ಪುರಸ್ಕೃತರು ಉದ್ಘಾಟಿಸಿ, “ಸ್ವಯಂಸೇವೆಯ ಮೂಲಕ ವ್ಯಕ್ತಿತ್ವ ನಿರ್ಮಾಣವು ವಿದ್ಯಾರ್ಥಿ ಜೀವನದ ಅತಿ ಮುಖ್ಯ ಅಂಶ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿಗಳಾದ ಡಾ. ಶುಭ ಮರವಂತೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ನಿಜವಾದ ಜೀವನದ ಅರ್ಥವನ್ನು ತಿಳಿಯಲು ಸಾಧ್ಯ ಎಂದು ಹೇಳುವ ಜೊತೆಗೆ ಸ್ವಯಂಸೇವಕರಿಗೆ ಸೇವಾ ಮನೋಭಾವದ ಮಹತ್ವ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಜೀವ ಸದಸ್ಯರಾದ ಟಿ.ಎ. ರಾಮ್ ಪ್ರಸಾದ್ ಅವರು ಮತ್ತೋರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಸೇವಾ ಯೋಜನೆಗಳ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ಯುವಕರು ಭಾಗವಹಿಸುವುದು ಅತಿಮುಖ್ಯ ಎಂದರು.
ಕಾರ್ಯಕ್ರಮಕ್ಕೆ ಡಾ. ಶಿವಪ್ರಸಾದ್ ಬಿ.ಎಸ್ ಅವರು ಅಧ್ಯಕ್ಷತೆ ವಹಿಸಿ, ಘಟಕಗಳ ಭವಿಷ್ಯದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಚಂದನ್ ಯು.ಎ ಹಾಗೂ ಶ್ರೀ ಗುರುರಾಜ್ ಎನ್, ಘಟಕಗಳ ಕಾರ್ಯಕ್ರಮಾಧಿಕಾರಿಗಳು, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಅನೇಕ ಸ್ವಯಂಸೇವಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಖುಷಿ ಜೈನ್ ನಿರೂಪಿಸಿ, ಕೀರ್ತನ.ಕೆ ಪ್ರಾರ್ಥನೆ, ಸ್ವಾಗತ ಕೀರ್ತನ ಎಂಜಿ ಮತ್ತು ಸಹನ ವಂದನಾರ್ಪಣೆ ನೆರವೇರಿಸಿದರು.